ಅಣ್ಣನ ವಿಲಾಪ

(ಚೌಪದಿ)

ಎಲ್ಲಿ ಹೋದನು ಅಮ್ಮ ಪುಟ್ಟಣ್ಣ ನಮ್ಮಾ? |
ನಿಲ್ಲದವನನು ತರುವೆ ಹುಡುಕಿ ನಾನಮ್ಮಾ| ||
ಅಲ್ಲಿಲ್ಲ, ಇಲ್ಲಿಲ್ಲ, ಎಲ್ಲಿಹನು ತಮ್ಮಾ? |
ತಲ್ಲಣಿಸುತಿದೆ ಮನವು; ಹೇಳು ಸೀತಮ್ಮಾ! ||೧||

“ಹಸೆಯ ಮಗುವನು ಮೊನ್ನೆ ಬಂದವರು ನೋಡಿ, |
ಮಸುಕು ಬಿಳಿ ಕಣ್ಣುಗಳ ಕದಗಳನು ಹೂಡಿ, ||
ಹಸಿ ತುಳಸಿದಳ ನೀರ ಒಣ ಬಾಯೊಳೂಡಿ, |
ಬಿಸಿಲುಕನ್ನಡಿಯನ್ನು ಮಾಡಿನಲ್ಲಿ ಮಾಡಿ,” ||೨||

“ಸುದ್ದ ನೀರನು ಮೀಸಿ, ಅರಸಿನವ ಪೂಸಿ, |
ಗದ್ದೆ ಗೋರುವ ಹಲಗೆಯಲ್ಲಿ ಎಲೆ ಹಾಸಿ, ||
ಮುದ್ದು ಪುಟ್ಟನನುಡಿಗೆಯಿಂದ ಸಿಂಗರಿಸಿ, |
ಸದ್ದಿಲ್ಲದೆಲ್ಲಿಗೊಯ್ದರು ಹೆಗಲೊಳಿರಿಸಿ?” ||೩||

ಚೆನ್ನಾಗಿ ಸೇಸೆಮಳೆ ಸೂಸುತಿರೆ ಕನ್ನೆ, |
ನಿನ್ನೊಡನಿರುಳ್ ನಿದ್ದೆಯಲ್ಲಿ ಕಂಡ ನಿನ್ನೆ- ||
‘ಬನ್ನಿ ಬಾ ಬಾ’ ಎಂದು ಮಾಡಿ ಕೈಸನ್ನೆ |
ನನ್ನೆದುರು ಬಂದು ಹೋದಾ ಪುಟ್ಟನನ್ನೆ. ||೪||

ಮಬ್ಬು ತೆರೆ ಹಿಂದುಗಡೆ ಜಾರಿದುದು ತಾರೆ. |
ಹೆಬ್ಬಿಸಿಲ ಉಗುಳುವಂತಿಹುದು ಹೊತ್ತಾರೆ. ||
ಉಬ್ಬಸರಿ ಮೊದಲೆ ಬಾಲನ ಮೈಯು ತಾರೆ, |
ಅಬ್ಬೆ! ನಡೆಯುವನೆಂತು? ಬೇಗ ಕರತಾರೆ. || ೫||

ಬಳ್ಳಿ ಉಯ್ಯಾಲೆಯಲ್ಲಿ ಗಿಳಿಯ ಮರಿ ತೂಗಿ, |
ಉಳ್ಳಲರ ಜೇನ್‌ಗುಡಿದು ಮರಿದುಂಬಿ ಕೂಗಿ, ||
ಬೆಳ್ಳಿ ನೀರ್‌ ಬಿಸಿಲಲ್ಲಿ ಮುಳುಗಿದಂತಾಗಿ |
ಹಳ್ಳಿ ಹಗಲಿರೆ-ಪುಟ್ಟನಾಡುವನೆ ಹೋಗಿ? ||೬||

ತಾಯ್ದನದ ಬಳಿ ಹೋಗದೀ ಕರುವು ನಿಂದು, |
ಕಾಯ್ದನಂ ಕರೆಯುತಿದೆ ನೆನಸಿ ‘ಮ್ಬೇ’ ಎಂದು. ||
ನಾಯ್ದುಗುಡದಲಿ ಬಿಡದೆ ಮಗುವಿದ್ದ ಸ್ಥಲವಾ, |
ಬಾಯ್ದೆರೆಯದಾಗಾಗ ಮೂಸುತಿದೆ ನೆಲವಾ. ||೭||

“ಇವನ ಚಿಲುವಿನ ಪುಂಜ ಹೋಯ್ತೆ ಮರಿಯಲ್ಲೆ! |
ಸವೆಯಿತೇ ಕಾಲವಂಕುರದ ಪರಿಯಲ್ಲೆ! ||
ಕುವರನಾ ಬಾಳೆ ಕಂದಿತೆ ಕಂದಿನಲ್ಲೆ! |
ಸವಿ ಬಂದುಗೇನಾಯ್ತು ನನೆಸಂದಿನಲ್ಲೆ! ||೮||

ದೀಪಾವಳಿಯ ದಿನ ಬಲೀಂದ್ರ ಮರ ನೆಡಿಸಿ, |
ಕೇಪಳಂಬಳ ಕಾಯಿ ಗುಂಡುಸರ ತೊಡಿಸಿ, ||
ಆ ಪೂಜೆಯಾಗುತಿರೆ ತಮ್ಮನನು ಬಿಟ್ಟು, !
ಕೈಪರೆ ಹೊಡೆವುದೆಂತು? ಬರುವುದೇ ಪುಟ್ಟು,? ||೯||

ನರಿಮೊಗರು ಜಾತ್ರೆಯಲಿ ನನ್ನನ್ನು ಕಂಡು, |
ಅರರೆ ತಮ್ಮನನೇಕೆ ನಾನು ಕರಕೊಂಡು |
ಬರಲಿಲ್ಲ? ಎಂದಾ ಗೆಳೆಯರೆನ್ನ ಕೇಳೆ, |
ಮರುಮಾತು ನಾನೇನು ಕೊಡಲಮ್ಮ ನಾಳೆ? ||೧೦||

ಒಬ್ಬನೇ ತಿನಿಸುಣಿಸು ನಾ ಬೇಡಲಾರೆ. |
ಇಬ್ಬರಿಲ್ಲದೆ ಈಗ ನಾನಾಡಲಾರೆ, ||
ತಬ್ಬಿಕೊಂಡೆನ್ನ ನೀಂ ಅಳುವುದೇನಿ೦ತು? |
ಅಬ್ಬೆ, ಅಳದಿರು ಪುಟ್ಟ ಎಲ್ಲಿಹನು ನಿಂತು? ||೧೧||

ತಾಯಿ- ಮುತ್ತಿನಾ ಸರಪಳಿಯೆ! ಮಾತಿನರಗಿಳಿಯೆ! |
ಎತ್ತ ಹೋದನು ತಮ್ಮ ಎಂಬುದು ತಿಳಿಯೆ. ||
ಇತ್ತವನೆ ಎತ್ತಿದನು! ಕೇಳು, ಪುತ್ಥಳಿಯೇ! |
ಬಿತ್ತಿದವ ಒತ್ತರಿಸಿದನು ತನ್ನ ಬಳಿಯೆ? ||೧೨||

ಮುಗುವು ಮುದ್ದಿನ ಮೊಗವು, ಅವನಿಲ್ಲಿ ಬಾರಂ |
ಆಗಲಿ ನಮ್ಮನು ಹೋದ ಹೋದ ಬಹುದೂರಂ ||
ಜಗದಂಬೆ ತೊಡೆಯಲ್ಲಿ ಲಾಲಿ ಕೇಳುತ್ತ |
ಸೋಗನಿದ್ದೆಗೊಂಡವನು ಬರುವನೇ ಇತ್ತ? ||೧೩||

ಮಗು- “ಈಗಲೇ ಹೊರಡುವೆನು, ಕೈ ಬಿಡೌ, ಅಮ್ಮಾ ! |
ಬೇಗ ಅಪ್ಪನು ಬರುವ ಮುಂಚೆಯೇ, ಅಮ್ಮಾ! ||
ಹೋಗುವೆನು, ಹೋಗುವೆನು; ಹೊರ ಹೊರಡು; ಅಮ್ಮಾ! |
ಕೂಗಿ ಅಳದಿರು; ದಾರಿ ತೋರಿಸೌ! ಅಮ್ಮಾ! || ೧೪ ||

ತಾಯಿ-ಚಂದು ಕೇಳ್! ದಾರಿಯಲಿ ನಾ ಪೋಪೆ ಮುಂದೆ |
ಬಂದವನು ಬಳಿಕ ನಿನ್ನಯ ಮುದ್ದು ತಂದೆ ||
ಮಂದಿ ಮಕ್ಕಳು ಪಡೆದು ಬಾ ನೀನು ಹಿಂದೆ. |
ಎಂದವನ ಬಾಯಿ ಬಿಗಿದಳು ಮುದ್ದಿನಿಂದೆ. ||೧೫||

ಆರಲಿಲ್ಲವು; ತಾಯ ಮನದ ಪರಿತಾಪಂ |
ಆರಿದುದು ಮಾತೆಯಾ ಮನೆಯ ಮಣಿದೀಪಂ. ||
ಆರಲಿಲ್ಲವು ತಾಯ ಕಂಬನಿಯ ಕೂಪಂ |
ಆರಿದುದು ಭಾಗ್ಯಾಬ್ಧಿ, ಅಯ್ಯಯ್ಯೋ ಪಾಪಂ! ||೧೬||
*****
(ಪದ್ಯ ಪುಸ್ತಕ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉದುರಿದೆಲೆಗಳು
Next post ಪರಿವರ್ತನೆ

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys